ಭಾರತ ಗಣರಾಜ್ಯದ ಉತ್ತರಖಂಡ್ ರಾಜ್ಯದ ಕುಮಾಊ ಭಾಗದಲ್ಲಿರುವ ಒಂದು ಪ್ರಮುಖ ಜಿಲ್ಲೆ. 29º-62º ಉ.ಅ. ಮತ್ತು 79º-67º ಪು.ರೇ. ಕಾಳಿ ಎಂದು ಹೆಸರಾಗಿರುವ ಗಂಗಾನದಿಯ ಮೇಲ್ಕಣಿವೆ ಹಾಗೂ ಗೋಗ್ರಾನದಿಗಳ ಮಧ್ಯಭಾಗದಲ್ಲಿದೆ. ಜಿಲ್ಲಾ ವಿಸ್ತೀರ್ಣ 3139 ಚ.ಕಿಮೀ. ಜನಸಂಖ್ಯೆ 6,30,567 (2001). ಸಮುದ್ರಮಟ್ಟಕ್ಕಿಂತ ಸು. 1625 ಮೀ ಎತ್ತರದಲ್ಲಿದ್ದು, ಹಿಮಾಲಯ ಪರ್ವತಶ್ರೇಣಿಗಳಲ್ಲಿ ಒಂದಾಗಿದೆ. 1790ರಲ್ಲಿ ಗೂರ್ಖಾ ಜನರು ಇದನ್ನು ವಶಪಡಿಸಿಕೊಂಡು ಒಂದು ಕೋಟೆಯನ್ನು ನಿರ್ಮಿಸಿದ್ದಾರೆ. 1891ರಲ್ಲಿ ಈ ಪಟ್ಟಣ ನೈನಿತಾಲ್ನೊಡನೆ ಸೇರಿ ಜಿಲ್ಲೆಯಾಯಿತು. ಇಲ್ಲಿ ಒಂದು ಉಚ್ಚ ಶಿಕ್ಷಣ ವಿದ್ಯಾಲಯವಿದೆ. ಭಾರತ ಸರ್ಕಾರದ ಸೈನಿಕ ಕೇಂದ್ರವಿದೆ. ಇಲ್ಲಿನ ನೀರು ಮತ್ತು ಹವೆಯಿಂದಾಗಿ ಆರೋಗ್ಯಧಾಮವೆನಿಸಿದೆ. 

ಇಲ್ಲಿ ರಾಮಕೃಷ್ಣಾಶ್ರಮಕ್ಕೆ ಸೇರಿದ ಪುರಾತನ ಮಠವೊಂದಿದೆ. ಒಮ್ಮೆ ಸ್ವಾಮಿ ವಿವೇಕಾನಂದರು ಆಲ್ಮೋರಕ್ಕೆ ಭೇಟಿಯಿತ್ತು ತಮ್ಮ ಧರ್ಮೋಪನ್ಯಾಸದಿಂದ ಜನರನ್ನು ಧರ್ಮಜಾಗೃತರನ್ನಾಗಿ ಮಾಡಿದರೆಂದು ಪ್ರತೀತಿ. ಸ್ವಾಮಿ ವಿವೇಕಾನಂದರ ಕೊಲಂಬೋದಿಂದ ಆಲ್ಮೋರದವರೆಗೆ ಎಂಬ ಉಪನ್ಯಾಸಮಾಲಿಕೆಯ ಕೃತಿ ಪ್ರಸಿದ್ಧವಾದುದು.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ